ಭವಿಷ್ಯತ್ತು.



ಅದುಮಿಟ್ಟ ಭಾವನೆಗಳೊಂದಿಗೆ
ಭವಿತವ್ಯದ ಕನಸು ಕಟ್ಟಿದರೆ,
ಬದುಕು....
ಬರಡಾಗದೆ-ಮರ್ಮಜ್ಞ.

ಏಪ್ರಿಲ್ 3,ಸಂಜೆ 5 ಗಂಟೆ 38 ನಿಮಿಷ.


ಯಾವತ್ತೂ ನಾನು ಬೇಡ ಅಂದುಕೊಂದದ್ದೇ ನಡೆಯುತ್ತೆ...
ಇವತ್ತೂ ಹಾಗೇ ಆಯಿತು.ನಾನು ಮೈಸೂರ್ ನಿಂದ ಬೆಂಗಳೂರ್ ಗೆ ಬರುವ ವೋಲ್ವೋ ಹತ್ತಿದ್ದೆ.ಸ್ವಲ್ಪ ಹೊತ್ತಿಗೆ ಹೊರಟಿತು.ಟಿಕೆಟ್ ಎಲ್ಲ ಮಾಡಿದ ಕಂಡಕ್ಟರ್ ಮುಂದೆ ಬಂದು ಯಾವುದೋ ಒಂದು ಫಿಲ್ಮ್ ನ ಸಿಡಿ ಹಾಕಿದ.ಅದೇನೆನ್ನಿಸಿತೋ ದರಿದ್ರದವನಿಗೆ....ಅದನ್ನು ತೆಗೆದು "ಮುಂಗಾರು ಮಳೆ" ಹಾಕಿದ.
ಇವತ್ತಿನ ವರೆಗೂ ನೋಡಿರಲಿಲ್ಲ...ಚೆನ್ನಾಗಿಲ್ಲ ಅಂತಲ್ಲ.ಬೇರೆಯದೇ ಕಾರಣಕ್ಕೆ ನೋಡಬಾರದೆಂದುಕೊಂಡಿದ್ದೆ.

"ಏಯ್ ನಾನು ನೀನು ಹೋಗ್ ನೋಡ್ವನ" ಅಂತ ಹೇಳಿದ್ದ ನನ್ನ ಗೆಳೆಯ.ಇವತ್ತಿನ ವರೆಗೂ ಕಾದಿದ್ದೆ.
ಎರಡು ವರ್ಷವಾಯಿತು ಅವನ ಜೊತೆಗೆ ನೋಡಲು ಸಾಧ್ಯವಿಲ್ಲ ಎನ್ನುವುದೂ ಗೊತ್ತಿದೆ.......ಹೌದು ಅವನು ನಮ್ಮನ್ನಗಲಿ ಎರಡು ವರ್ಷವಾಯಿತು.
ಪಾಪಿ ಕಂಡಕ್ಟರ್ ಸರಿ ಸಂಜೆ ಹೊತ್ತಲ್ಲಿ ಹಳೆಯದೆಲ್ಲವನ್ನೂ ಕೆರೆದು ಗಾಯವಾಗುವಂತೆ ಮಾಡಿದ್ದ.ಉಹುಂ ಅವನ ನೆನಪು ಅಳಿಸಿ ಹಾಕುವಂಥದ್ದಲ್ಲ.

ಹೇಗೆ ಮರೆಯಲಿ ನಿನ್ನ,
ಹೆಜ್ಜೆ ಮೂಡಿಸಿದ ಗೆಳೆಯ.
ವದ್ದೆಯಾಗಿದೆ ಹೃದಯ,
ಮನದ ರೋದನೆಗೆ.....


ಕೊನೆಗೂ ಅವನಿಲ್ಲದೆ ನೋಡುವಂತಾಯಿತು...ಅದೂ ಅರ್ಧ ಮಾತ್ರ...ಮೈಸೂರ್ ರೋಡಿನ ಬಿ.ಹೆಚ್.ಈ.ಎಲ್ ಹತ್ತಿರ ಬಂದಾಗ,ರೋಡು ತುಂಬಿ ತುಳುಕುತ್ತಿತ್ತು.ನಮ್ಮ ಬಸ್ಸಿಗೂ ಉಸಿರು ಕಟ್ಟಿತೋ ಏನೋ,ಬಂದು ಬಿದ್ದಿತು.

ಆವಾಗ ತಾನೇ ಗಣೇಶ್ ಈ ಸಾಲನ್ನು ಹೇಳಿ ಮುಗಿಸಿದ್ದ....
"ಹೃದಯದಲ್ಲಿ ಇಷ್ಟೊಂದು ನೋವನ್ನಿಟ್ಕೊಂಡು ನಾನು ಬದ್ಕತೀನ ದೇವದಾಸು?"

ನನ್ನ ಗೆಳೆಯ ಕೂಡ ಅಷ್ಟೊಂದು ನೋವನ್ನುಂಡಿದ್ನಾ? ಗೊತ್ತಿಲ್ಲ....
ಮನದ ರೋದನೆಗೆ ಹೃದಯ ಹಸಿಯಾಗಿದ್ದಂತೂ ಸತ್ಯ.

ರೋದನೆ....




ಮನವು
ಮುಳ್ಳಾಗಿಹುದು,
ಹೃದಯವು ಒಡೆದು.
ಮನತಣಿಸುವ ಮನದನ್ನೆ ಬರಲು,
ಬರ್ಬರ ಬದುಕು ಹಸನಾಗುವುದೇ-ಮರ್ಮಜ್ಞ.